ಕೊಪ್ಪಳದಲ್ಲಿ ಅಸ್ಪೃಶ್ಯತೆ​: ಉಪಹಾರ ನಿರಾಕರಿಸಿದ್ದ ಹೋಟೆಲ್​ನಲ್ಲಿ ಉಪಹಾರ ಸೇವನೆ, ಶಾಂತಿ ಸಭೆ ಯಶಸ್ವಿ

 

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ದಶಕಗಳೇ ಕಳೆದಿವೆ. ಭಾರತ ವಿಶ್ವದಲ್ಲಿ ದೊಡ್ಡ ಸುದ್ದಿ ಮಾಡುತ್ತಿದೆ. ಆದರೆ ದೇಶದಲ್ಲಿ ಇನ್ನು ಅಸ್ಪ್ರಶ್ಯತೆ ಆಚರಣೆ ಮಾತ್ರ ನಿಲ್ಲುತ್ತಿಲ್ಲ. ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಅಸ್ಪ್ರಶ್ಯತೆ ಜೀವಂತವಾಗಿದೆ. ಸುದ್ದಿ ಎಲ್ಲಡೆ ವೈರಲ್ ಆಗ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಉಪಾಹಾರ ನಿರಾಕರಿಸಿದ್ದ ಹೋಟೆಲ್​ನಲ್ಲಿ ದಲಿತರೊಂದಿಗೆ ಸವರ್ಣೀಯರು ಮತ್ತು ಅಧಿಕಾರಿಗಳು ಉಪಾಹಾರ ಸೇವಿಸುವ ಮೂಲಕ ಗ್ರಾಮದ ಎರಡು ಸಮುದಾಯಗಳ ಶಾಂತಿ ಪಾಲನಾ ಸಭೆ ಮಾಡಿದ್ದಾರೆ.


ಕೊಪ್ಪಳ, ಫೆಬ್ರವರಿ 15: ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಜೀವಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಉಪಾಹಾರ ನಿರಾಕರಿಸಿದ್ದ ಹೋಟೆಲ್​ನಲ್ಲಿ ದಲಿತರೊಂದಿಗೆ ಸವರ್ಣೀಯರು ಮತ್ತು ಅಧಿಕಾರಿಗಳು ಉಪಾಹಾರ ಸೇವಿಸುವ ಮೂಲಕ ಗ್ರಾಮದ ಎರಡು ಸಮುದಾಯಗಳ ಶಾಂತಿ ಸಭೆ ಯಶಸ್ವಿ ಆಗಿದೆ. ಈ ಗ್ರಾಮದಲ್ಲಿ ಇಂದಿಗೂ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲವಂತೆ. ಅಂಗಡಿಗಳಲ್ಲಿ ಎಲ್ಲರಂತೆ ಆಹಾರ, ನೀರು ನೀಡುವದಿಲ್ಲವಂತೆ. ಕಟಿಂಗ್ ಶಾಪ್​ನಲ್ಲಿ ಕೂಡ ದಲಿತರಿಗೆ ಕಟಿಂಗ್ ಮಾಡದೇ, ಅಸ್ಪ್ರಶ್ಯತೆ ಆಚರಣೆ ನಡೆಯುತ್ತಿದೆ. ಅನೇಕ ವರ್ಷಗಳಿಂದ ನಡೆಯುತ್ತಿರುವ ಅಸ್ಪ್ರಶ್ಯತೆ ವಿರುದ್ದ ಇದೀಗ ದಲಿತ ಸಮುದಾಯದವರು ಆಕ್ರೋಶ ಹೊರಹಾಕಿದ್ದರು.

ಗ್ರಾಮದಲ್ಲಿ ಅಸ್ಪ್ರಶ್ಯತೆ ಜೀವಂತ ಸುದ್ದಿ ಎಲ್ಲಡೆ ವೈರಲ್ ಆಗ್ತಿದ್ದಂತೆ ಗ್ರಾಮಕ್ಕೆ ಇಂದು ಅನೇಕ ಸರ್ಕಾರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಹಾಯಕ ಆಯುಕ್ತ ಮಹೇಶ್ ಮಾಲಗತ್ತಿ, ಡಿವೈಎಸ್ಪಿ ಚನ್ನಪ್ಪ ಸರವಗೋಳ್ ಸೇರಿದಂತೆ ಅನೇಕರು, ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ ಕೂಡ ಮಾಡಲಾಗಿತ್ತು. ನಂತರ ಗ್ರಾಮದ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಾಂತಿ ಪಾಲನಾ ಸಭೆ ಕೂಡ ನಡೆಸಲಾಯಿತು.

ಇಬ್ಬರ ಬಂಧನ 

ಗ್ರಾಮ್​ ಪಂಚಾಯತ್ ಕಚೇರಿಯಲ್ಲಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ, ಸಂವಿಧಾನದ ಪೀಠಿಕೆಯನ್ನು ಓದುವ ಮೂಲ ಚಾಲನೆ ನೀಡಲಾಯಿತು. ಇನ್ನು ಗ್ರಾಮದಲ್ಲಿ ಎಲ್ಲರು ಕೂಡ ಸಮನಾತೆಯನ್ನು ಆಚರಿಸಬೇಕು. ಅಸ್ಪ್ರಶ್ಯತೆಯನ್ನು ಆಚರಿಸಿದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಅಂತ ಅಧಿಕಾರಿಗಳು ಗ್ರಾಮಸ್ಥರಿಗೆ ಖಡಕ್ ಸೂಚನೆ ನೀಡಿದ್ದಾರೆ. ಮೂವರ ವಿರುದ್ದ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ವೆಂಕೋಬ್, ಸಂಜೀವಪ್ಪ ಎನುವವರನ್ನು ಬಂಧಿಸಿದ್ದಾರೆ.

ಎರಡು ದಿನದ ಹಿಂದೆ ಗ್ರಾಮದಲ್ಲಿರುವ ಕಟಿಂಗ್ ಶಾಪ್​ಗೆ ಹೋಗಿದ್ದ ದಲಿತ ಸಮುದಾಯದ ವ್ಯಕ್ತಿಗೆ ಕಟಿಂಗ್ ಮಾಡಲು ನಿರಾಕರಿಸಲಾಗಿತ್ತು. ಜೊತೆಗೆ ಹೋಟೆಲ್​ಗೆ ಹೋದರೆ ಒಳಗೆ ಬಂದಿದ್ದಕ್ಕೆ ದಲಿತ ಸಮುದಾಯದವರಿಗೆ ಮೇಲ್ವರ್ಗದವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ದಲಿತ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಗೆ ದಲಿತ ಸಮುದಾಯದವರು ಹೋಟೆಲ್ ಮಾಲೀಕ, ಕಟಿಂಗ್ ಶಾಪ್ ಮಾಲೀಕರ ವಿರುದ್ದ ದೂರ ನೀಡಿದ್ದಾರೆ.

ದೇಶಕ್ಕೆ ಸ್ವತಂತ್ರ ಬಂದು ಅನೇಕ ದಶಕಗಳು ಕಳೆದರೂ ಕೂಡ ಗ್ರಾಮದಲ್ಲಿ ಇಂದಿಗೂ ಅಸ್ಪ್ರಶ್ಯತೆ ಜೀವಂತವಾಗಿದೆ. ಗ್ರಾಮದಲ್ಲಿ ನಮಗೆ ದೇವಸ್ಥಾನದೊಳಗೆ ಪ್ರವೇಶ ನೀಡುತ್ತಿಲ್ಲ. ಹೋಟೆಲ್​ನಲ್ಲಿ ಕೂಡ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ನೀರನ್ನು ಎತ್ತರಿಸಿ ಹಾಕುತ್ತಾರೆ. ನಾವು ಮನುಷ್ಯರು ಅನ್ನೋದನ್ನೆ ಗ್ರಾಮದ ಮೇಲ್ವರ್ಗದವರು ಮರೆತಿದ್ದಾರೆ ಅಂತ ದಲಿತ ಸಮುದಾಯದವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮಗೂ ಸಮಾನತೆ ಬೇಕು ಅಂತ ಆಗ್ರಹಿಸಿದ್ದಾರೆ. ಸರಿಸುಮಾರು ನಾಲ್ಕು ಸಾವಿರ ಜನಸಂಖ್ಯೆ ಇರುವ ಹಾಲವರ್ತಿ ಗ್ರಾಮದಲ್ಲಿ ಎಂಬತ್ತಕ್ಕೂ ಹೆಚ್ಚು ದಲಿತ ಕುಟುಂಬಗಳಿವೆ. ಬೇರೆ ಬೇರೆ ಜಾತಿಯವರು ಕೂಡ ಇದ್ದಾರೆ. ಆದರೆ ದಲಿತರನ್ನು ಬೇರೆ ಸಮುದಾಯದವರು ಸಮಾನತೆಯಿಂದ ಕಾಣುತ್ತಿಲ್ಲ ಅಂತ ದಲಿತ ಸಮುದಾಯದವರು ಆರೋಪಿಸಿದ್ದರು.

Post a Comment

Previous Post Next Post