ಶಿವಮೊಗ್ಗ: ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದಕ್ಕೆ ಶಿವಮೊಗ್ಗ ಜಿಲ್ಲಾ ಎನ್.ಎಸ್. ಯು. ಐ. ವತಿಯಿಂದ ತೀವ್ರ ಪ್ರತಿಭಟನೆ.

 ಮಾನನಷ್ಠ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ಹೊರಬೊದ್ದೊಡನೆ, ತೀರ್ಪಿನಲ್ಲಿ ಮೇಲ್ಮನವಿಗೆ ಅವಕಾಶವಿದ್ದರೂ ಆದೇಶದ ಪ್ರತಿ ಕೈಗೆ ಸಿಗುವ ಮೊದಲೇ ಕಾಂಗ್ರೆಸ್ನ ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು. ಐ ತೀವ್ರವಾಗಿ ಖಂಡಿಸಿದೆ.

 ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಾ ದ್ವೇಷದ ರಾಜಕಾರಣ ಮಾಡುತ್ತಿದೆ. ಆ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆತಂಕ ತಂದೊಡ್ಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮುಂದಿನ ಪ್ರಧಾನಿ ಅಭ್ಯರ್ಥಿ. ಅವರನ್ನು ರಾಜಕೀಯವಾಗಿ ಮುಗಿಸುವ ಸಂಚಿನಿಂದಾಗಿ ಬಿಜೆಪಿ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದಾಗಲೂ ತರಾತುರಿಯಲ್ಲಿ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿದೆ. ಇದು ಖಂಡನೀಯ ಎಂದು ತಿಳಿಸಿದ್ದಾರೆ.

ಮೋದಿಗಳ ವಿರುದ್ದ ರಾಹುಲ್ ಮಾತನಾಡಿದ್ದು ಒಬಿಸಿಗಳಿಗೆ ಅವಮಾನ ಎಂದು ಬಿಜೆಪಿಯವರು ಹೇಳುತ್ತಾರೆ. ನೀರವ್ ಮೋದಿ ಬಿಸಿಗೆ ಸೇರಿದವನೇ? ಲಲಿತ್ ಮೋದಿ, ಮೆಹುಲ್ ಚೋಕ್ಸಿ ಒಬಿಸಿಯೇ? ಅವರು ದೇಶದ ಜನರ ಹಣದೊಂದಿಗೆ ಪರಾರಿಯಾಗಿದ್ದಾರೆ. ಅಂತಹ ದೇಶಭ್ರಷ್ಟರನ್ನು ಟೀಕಿಸಿದರೆ ಬಿಜೆಪಿಗೆ ನೋವಾಗುತ್ತದೆ. ದೇಶ ಉಳಿಸಲು ಕೆಲಸ ಮಾಡಿದವರನ್ನು ಬಿಜೆಪಿ ಶಿಕ್ಷಿಸುತ್ತದೆ. ದೇಶದ ಹಣ ಲೂಟಿ ಮಾಡಿದವರನ್ನು ವಿದೇಶಕ್ಕೆ ಕಳಿಸುತ್ತಾರೆ. ಗಾಮ್ಧಿ ಕುಟುಂಬದ ರಕ್ತ ಈ ದೇಶದಲ್ಲಿ ಪ್ರಜಾಪ್ರಭುತ್ವ ವನ್ನು ಪೋಷಿಸಿದೆ. ನಾವು ದೇಶದ ಪ್ರಜಾಪ್ರಭುತ್ವಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದ. ಈ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದವರು ಕಾಂಗ್ರೆಸ್ನ ಮಹಾನ್ ನಾಯಕರು. ದೇಶದ ಏಕತೆಗಾಗಿ ಸಾವಿರಾರು ಕಿಲೋಮೀಟರ್ ನಡೆದ ಹಾಗೂ ಹುತಾತ್ಮ ಪ್ರಧಾನಿಯ ಮಗ ಯಾವತ್ತೂ ಈ ದೇಶಕ್ಕೆ ಅವಮಾನ ಮಾಡಿವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಅನರ್ಹಗೊಳಿಸಿರುವುದನ್ನು ವಾಪಾಸ್ಸು ಪಡೆಯಬೇಕು. ರಾಷ್ಠ್ರಪತಿಗಳು ಮಧ್ಯೆ ಪ್ರವೇಶಿಸಿ ರಾಹುಲ್ ಗಾಂಧಿ ಅವರ ಅನರ್ಹತೆಯನ್ನು ತಡೆಹಿಡಿಯಬೇಕು. ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗಿರುವ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಬೇಕು ಎಂದು ಈ ದಿನ ರೈಲು ತಡೆ ನಡೆಸಿ ಪ್ರತಿಭಟಿಸುತ್ತಿದ್ದೇವೆ ಎಂದು  ಎನ್.ಎಸ್.ಯು. ಐ  ಹೇಳಿದೆ. ಕೂಡಲೇ  ರಾಹುಲ್ ಗಾಂಧಿ ಅವರ ಸಂಸತ್ ಸ್ಥಾನದ ಅನರ್ಹತೆಯನ್ನು ತಡೆಯದಿದ್ದಲ್ಲಿ, ತೀವ್ರವಾಗಿ ಪ್ರತಿಭಟನೆ ನಡೆಸುವುದು  ಅನಿವಾರ್ಯವಾಗಲಿದೆ ಎಂದು ಪತ್ರದ ಮೂಲಕ ರಾಷ್ಠ್ರಪತಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಪತ್ರದಲ್ಲಿ ತಿಳಿಸಿದ್ದಾರೆ.

Post a Comment

Previous Post Next Post