ಬಡವರ ಭೂಮಿಗೆ ಭೂಗಳ್ಳರ ಕಣ್ಣು, ಶಿವಮೊಗ್ಗ ವಿಮಾನ ನಿಲ್ದಾಣ ಸುತ್ತಮುತ್ತ ಮಾಫಿಯಾ

 ಶಿವಮೊಗ್ಗ: ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದಂತೆ ಆ ಭಾಗದಲ್ಲಿ ಕಂದಾಯ ಭೂಮಿ, ಗೋಮಾಳ, ಖರಾಬು ಮತ್ತು ಇತರೆ ಸರಕಾರಿ ಭೂಮಿಗಳ ಮೇಲೆ ಭೂ ಕಬಳಿಕೆ ಮಾಫಿಯಾದವರ ಕಣ್ಣು ಬಿದ್ದಿದೆ.


ಈ ಹಿಂದೆ ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗುತ್ತಿದ್ದಂತೆ ಭೂ ಕಬಳಿಕೆ ಮಾಫಿಯಾದವರು ಬಡ ಮತ್ತು ಅಮಾಯಕ ರೈತರನ್ನು ಬೆದರಿಸಿ ಭೂಮಿ ಕಬಳಿಸಿದಂತೆ ಶಿವಮೊಗ್ಗದಲ್ಲೂಅಂತಹದ್ದೊಂದು ಮಾಫಿಯಾ ಎಚ್ಚರಗೊಂಡಿದೆ. ರಿಯಲ್‌ ಎಸ್ಟೇಟ್‌, ರಾಜಕೀಯ ಮತ್ತು ಸ್ಥಳೀಯ ಪುಢಾರಿಗಳು ಗುಂಪಾಗಿ ಈ ಕೃತ್ಯ ನಡೆಸುತ್ತಿದ್ದಾರೆ. ಅಧಿಕಾರಿಗಳ ಸಹಕಾರದಿಂದ ಬೋಗಸ್‌ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ರೌಡಿಗಳ ಮೂಲಕ ಅಮಾಯಕ ರೈತರಿಗೆ ಬೆದರಿಸಿ ಒಕ್ಕಲೆಬ್ಬಿಸುವ ಪ್ರಯತ್ನಗಳು ಆರಂಭವಾಗಿವೆ.

ವಿಮಾನ ನಿಲ್ದಾಣ ಸುತ್ತಲೂ ಇರುವ ಕೊರ್ಲಹಳ್ಳಿ, ಸೋಗಾನೆ, ನಿದಿಗೆ, ಭದ್ರಾವತಿ ತಾಲೂಕು ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಂದಾಯ, ಗೋಮಾಳ, ಖರಾಬು, ಖರಾಬುಕಟ್ಟೆ, ಸರಕಾರಿ ಪಡೆ, ಕೆರೆಕಟ್ಟೆ ಮತ್ತು ಇತರೆ ಸರಕಾರಿ ಭೂಮಿ ಅಧಿಕವಾಗಿದೆ. ಇದರಲ್ಲಿ ಬಹುತೇಕ ಭೂಮಿಯನ್ನು ರೈತರು 40-50 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ದರ್ಖಾಸು, ಫಾರಂ ನಂ.53, 57 ಅಡಿಯಲ್ಲಿಅರ್ಜಿ ಸಲ್ಲಿಸಿದರೂ ಬಹಳಷ್ಟು ರೈತರಿಗೆ ಇದುವರೆಗೂ ಭೂಮಿ ಒಡೆತನ ಸಿಕ್ಕಿಲ್ಲ. ಇಷ್ಟಾಗಿಯೂ ರೈತರು ಬಾವಿ, ಕೊಳವೆಬಾವಿ ನಿರ್ಮಿಸಿಕೊಂಡು ತೋಟ ಸಹ ಅಭಿವೃದ್ಧಿಪಡಿಸಿದ್ದಾರೆ.

ಇಂತಹ ಭೂಮಿ ಮೇಲೆ ಭೂ ಕಬಳಿಕೆ ಮಾಫಿಯಾದವರು ಕಣ್ಣು ಹಾಕಿದ್ದಾರೆ. ಎರಡು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂಮಿ ಹಕ್ಕು ನೀಡದ ಕಂದಾಯ ಇಲಾಖೆ ಅಧಿಕಾರಿಗಳು ಲಂಚದ ಹಣಕ್ಕೆ ಆಸೆಪಟ್ಟು ರಾತ್ರಿ ಬೆಳಗಾಗುವುದರೊಳಗೆ ಮಾಫಿಯಾದವರಿಗೆ ಅಕ್ರಮ ದಾಖಲೆಗಳನ್ನು ಮಾಡಿಕೊಡುತ್ತಿದ್ದಾರೆ. ಸ್ವಾಧೀನದಲ್ಲಿಇರದೆ ಹೋದರೂ ಸ್ವಾಧೀನದಲ್ಲಿರುವಂತೆ ಬೋಗಸ್‌ ದಾಖಲೆಗಳನ್ನು ಸೃಷ್ಟಿಸಿ ಕೊಡುತ್ತಿದ್ದಾರೆ. ಈಗಾಗಲೆ ಇಂತಹ ಮೂರು ಪ್ರಕರಣಗಳು ಬೆಳಕಿಗೆ ಬಂದಿದ್ದು ಮಾಫಿಯಾದವರ ಮಸಲತ್ತಿಗೆ ನೊಂದ ರೈತರು ಪ್ರತಿಭಟನೆ ನಡೆಸಿ ದೂರು ಸಹ ಸಲ್ಲಿಸಿದ್ದಾರೆ.

ಅಧಿಕಾರಿಗಳ ಸಾಥ್‌
ಮಾಫಿಯಾದವರಿಗೆ ಕಂದಾಯ ಇಲಾಖೆ ಅಧಿಕಾರಿಗಳೇ ಸಾಥ್‌ ನೀಡುತ್ತಿದ್ದಾರೆ. ರೈತರು ಮನವಿ ಸಲ್ಲಿಸಿ ಕಾಡಿ ಬೇಡಿದರೂ ಸರ್ವೆಗೆ ಬರದ ಅಧಿಕಾರಿ, ಸಿಬ್ಬಂದಿ ಮಾಫಿಯಾದವರು ಕರೆದಲ್ಲಿಗೆ ಬಂದು ಓರಲ್‌ ನಕ್ಷೆಯನ್ನು ನಿಂತ ಜಾಗದಲ್ಲೆ ಸಿದ್ಧಪಡಿಸಿಕೊಡುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಭೂ ಮಾಪನ ನಿಯಮಗಳನ್ನು ಉಲ್ಲಂಘಿಸುವುದಲ್ಲದೆ ನಕ್ಷೆ ತಿದ್ದುಪಡಿ, ನಕಾಶೆ ತೋರಿಸಿದ ಹಾದಿಯನ್ನು ತಿರುಚುವಿಕೆ, ಪಥ ಬದಲಾವಣೆ, ಸರ್ವೆ ನಂಬರ್‌ಗಳನ್ನೇ ಬದಲಾವಣೆ ಮಾಡಿ ಪಕ್ಕಾಪೋಡಿಗಳನ್ನು ಸೃಷ್ಟಿಸುತ್ತಿದ್ದಾರೆ. ಅಕ್ರಮ ದಾಖಲೆಗಳನ್ನು ಸಿದ್ಧಪಡಿಸಿ ಯಾರನ್ನೋ ಭೂಮಿ ಒಡೆಯನನ್ನಾಗಿ ಮಾಡುತ್ತಿದ್ದಾರೆ.

ತಕರಾರು ಭೂಮಿ ಮೇಲೂ ಕಣ್ಣು
ಭೂ ಕಬಳಿಕೆ ಮಾಫಿಯಾದವರು ಸರಕಾರಿ ಭೂಮಿ ಅಲ್ಲದೆ ಭೂಮಿ ಒಡೆತನಕ್ಕೆ ಸಂಬಂಧಿಸಿದಂತೆ ಅಕ್ಕಪಕ್ಕದವರು, ಸಹೋದರರು, ಬಂಧುಬಳಗದವರ ನಡುವೆ ವಿವಾದ ಇರುವಂತಹ ಭೂಮಿಗಳ ಮೇಲೂ ಕಣ್ಣು ಹಾಕಿದ್ದಾರೆ. ಹಲವು ವರ್ಷಗಳ ವಿವಾದದಿಂದ ಬೇಸತ್ತವರು ಸಮಸ್ಯೆ ಬಗೆಹರಿದು ತಲೆ ತೊಳೆದುಕೊಂಡರೆ ಸಾಕು ಎಂಬ ಮನಸ್ಥಿತಿಯಲ್ಲಿರುತ್ತಾರೆ. ಅಂತಹವರೊಂದಿಗೆ ಸಂಧಾನ ನಡೆಸಿ ಅಥವಾ ಬೆದರಿಕೆ ಹಾಕಿ ಕಡಿಮೆ ದರಕ್ಕೆ ಭೂಮಿ ಖರೀದಿಸಿ ದಾಖಲೆಗಳನ್ನು ಸರಿಪಡಿಸಿ ನಾಲ್ಕೈದುಪಟ್ಟು ಅಧಿಕ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆ. ದೊಡ್ಡ ನಗರಗಳು ಮತ್ತು ಚಲನಚಿತ್ರಗಳಲ್ಲಿ ನೋಡುತ್ತಿದ್ದ ಇಂತಹ ಚಿತ್ರಣವನ್ನು ಈಗ ಶಿವಮೊಗ್ಗದಲ್ಲೇ ಕಾಣುವಂತಾಗಿದೆ.

ಭೂ ಕಬಳಿಕೆ ಮಾಫಿಯಾ ಗಂಭೀರವಾದ ಪ್ರಕರಣ. ಇದರ ಬಗ್ಗೆ ಸರಿಯಾದ ದಾಖಲೆಗಳನ್ನು ಸಲ್ಲಿಸಿದಲ್ಲಿಅಂತಹವರ ವಿರುದ್ಧ ಮತ್ತು ಅಂತಹವರಿಗೆ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಹೇಳಿದ್ದಾರೆ.



ಅಕ್ರಮ ದಾಖಲೆಗಳನ್ನು ಸೃಷ್ಟಿಸಿಕೊಂಡು ಅಮಾಯಕ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಅಧಿಕಾರಿಗಳು ಭೂ ಸರ್ವೆ ಕಾಯಿದೆಯನ್ನು ಉಲ್ಲಂಘಿಸಿ ಓರಲ್‌ ನಕ್ಷೆಯನ್ನೆ ಅನುಮೋದಿಸಿ ದಾಖಲೆಗಳನ್ನು ಮಾಡಿಕೊಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಚಂದ್ರಪ್ಪ ಹೇಳಿದ್ದಾರೆ.

Post a Comment

Previous Post Next Post