ಬಿಎಂಟಿಸಿ ಬಸ್ ನಲ್ಲಿ ಬೆಂಕಿ, ಕಂಡಕ್ಟರ್ ಸಜೀವ ದಹನ

 ಬಿಎಂಟಿಸಿ ಬಸ್​​ನಲ್ಲಿ ಹಠಾತ್  ಬೆಂಕಿ ಕಾಣಿಸಿಕೊಂಡು, ಕಂಡಕ್ಟರ್  ಸಜೀವ ದಹನವಾಗಿರುವ ದಾರುಣ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಸುಕಿನಲ್ಲಿ  ನಡೆದಿದೆ.


By :Rekha.M
Online Desk

ಬೆಂಗಳೂರು: ಬಿಎಂಟಿಸಿ ಬಸ್​​ನಲ್ಲಿ ಹಠಾತ್  ಬೆಂಕಿ ಕಾಣಿಸಿಕೊಂಡು, ಕಂಡಕ್ಟರ್  ಸಜೀವ ದಹನವಾಗಿರುವ ದಾರುಣ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಸುಕಿನಲ್ಲಿ  ನಡೆದಿದೆ.

 45 ವರ್ಷದ ಮುತ್ತಯ್ಯಸ್ವಾಮಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಲಿಂಗಧೀರನಹಳ್ಳಿ ಬಿಎಂಟಿಸಿ ಬಸ್​ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.  ಬಸ್​ನಲ್ಲೇ ಮಲಗಿದ್ದ ಕಂಡಕ್ಟರ್​ ಸುಟ್ಟು ಕರಕಲಾಗಿದ್ದಾರೆ. ಅದೃಷ್ಟವಶಾತ್  ಬಸ್​ ​ಚಾಲಕ ಪ್ರಕಾಶ್  ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುಮ್ಮನಹಳ್ಳಿ ಡಿಪೋ-31ಗೆ ಸೇರಿದ ಬಸ್​ನಲ್ಲಿ  ಮುತ್ತಯ್ಯಸ್ವಾಮಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಲಿಂಗದೀರನಹಳ್ಳಿ ಬಸ್​ ನಿಲ್ದಾಣದಲ್ಲಿ ಬಸ್​ನಲ್ಲೇ ಚಾಲಕ ಹಾಗೂ ನಿರ್ವಾಹಕ ಮಲಗಿದ್ದರು. ಆದ್ರೆ, ಚಾಲಕ ಬೆಳಗ್ಗೆ ಎದ್ದು ಶೌಚಾಲಯಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದೆ.   ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ನಿರ್ವಾಹಕ ಮುತ್ತಯ್ಯಸ್ವಾಮಿ ಮೂಲತಃ ಗದಗ ಜಿಲ್ಲೆಯ ಹಾಲೂರಿನವರು. ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಬಿಎಂಟಿಸಿ ದುರಂತ ಘಟನೆಗೆ  ತೀವ್ರ ಸಂತಾಪವನ್ನು ಸೂಚಿಸಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನಿರ್ವಾಹಕರ ಕುಟುಂಬದವರಿಗೆ ಮಾಹಿತಿ‌ ನೀಡಲಾಗಿದೆ. ಪೊಲೀಸರು ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿಸಿದೆ. 


Post a Comment

Previous Post Next Post