ಬಿಜೆಪಿ ಶೇ 90 ರಷ್ಟು ಭರವಸೆ ಈಡೇರಿಸಿಲ್ಲ, ಬಜೆಟ್ ಭಾಷಣಕಷ್ಟೇ ಸೀಮಿತ: ಡಿಕೆಶಿ


ಮೈಸೂರು: 'ಪ್ರಣಾಳಿಕೆಯ ಶೇ 90 ರಷ್ಟು ಭರವಸೆಗಳನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಈಡೇರಿಸಿಲ್ಲ. ಅಂತಿಮ ಬಜೆಟ್ ಕೂಡ ಭಾಷಣಕ್ಕಾಗಿಯೇ ಹೊರತು ಯಾವುದು ಅನುಷ್ಠಾನ ಗೊಳ್ಳುವುದಿಲ್ಲ.' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

   ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ' 2022 ರ ಬಜೆಟ್ ಕೂಡ ಘೋಷಣೆಗಷ್ಟೇ ಸೀಮಿತವಾಯಿತು.ಡಬಲ್ ಎಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನು ವೇಗಗೊಳಿಸಬೇಕಿತ್ತು, ಆದರೆ ಎಂಜಿನ್ ಮುಂದೆ ಹೋಗಲೇ ಇಲ್ಲ.ಬಂದಿದ್ದು ಕೇವಲ  ಹೊಗೆ ಅಷ್ಟೇ 'ಎಂದು ಟೀಕಿಸಿದರು.

'ಬೊಮ್ಮಾಯಿ ನುಡಿದಂತೆ ನಡೆಯಲಿಲ್ಲ .ಕಳೆದ ಬಾರಿ ಬಜೆಟ್ ನಲ್ಲಿ ಎಷ್ಟು ಅನುಷ್ಠಾನಗೊಳಿಸಿದ್ದಾರೆಂಬ ಪ್ರಗತಿ ಪತ್ರ ಬಿಡುಗಡೆ ಮಾಡಲಿ' ಎಂದು ಸವಾಲು ಹಾಕಿದರು.

'ಪ್ರಣಾಳಿಕೆಯಲ್ಲಿ ಸುಳ್ಳುಗಳೇ ತುಂಬಿವೆ.ಪ್ರತಿ ರೈತನ ರೂ.1 ಲಕ್ಷ  ಬೆಳೆ  ಸಾಲ ಮನ್ನಾ ಮಾಡುತ್ತೇವೆಂದರು, ಕನಿಷ್ಠ ಬೆಂಬಲ  ಯೋಜನೆಯಡಿ ರೈತರ ಆದಾಯ ದ್ವಿಗುಣವಾಗುತ್ತದೆ ಎಂದಿದ್ದರು.ರೂ 5 ಸಾವಿರ ಕೋಟಿ ರೈತ ಬಂಧು ಆವರ್ತ ನಿಧಿ ಎಲ್ಲಿಟ್ಟಿದ್ದೀರಿ?ಪಂಪ್ ಸೆಟ್ ಗಳಿಗೆ 10 ಗಂಟೆ ತ್ರಿ ಫೇಸ್ ವಿದ್ಯುತ್ ಎಲ್ಲಿ? ಎಂದು ಪ್ರಶ್ನಿಸಿದರು.

  ಎಲ್ಲಾ ಕೆರೆಗಳನ್ನು ಪುನಶ್ಚೇತನಗೊಳಿಸುವ  ಮಿಷನ್ ಕಲ್ಯಾಣ ಯೋಜನೆ ಜಾರಿಗೊಂಡಿದೆಯೇ? ರೂ.10 ಸಾವಿರ ಕೋಟಿ ಶ್ರೀ ಉನ್ನತ ನಿಧಿ ಏನಾಯಿತು?ಸ್ಮಾರ್ಟ್ ಫೋನ್ ಹೆಣ್ಣು ಮಕ್ಕಳಿಗೆ ಕೊಡುತ್ತೇವೆ ಎಂದರು-ಒಂದು ಬಂದಿಲ್ಲ ಇಂತಹ 170 ಪ್ರಶ್ನೆಗಳಿಗೆ ವಿಧಾನ ಸಭೆಯಲ್ಲಿ ಬಿಜೆಪಿಗರು ಉತ್ತರ ನೀಡಲಿಲ್ಲ ಮೂರು ವರ್ಷದ ಅಧಿಕಾರದ ಅವಧಿಯಲ್ಲಿ ಸುಳ್ಳಿನ ಸರಮಾಲೆಯನ್ನು ಪೋಣಿಸಿದ್ದಾರೆ.ಕಾರ್ಮಿಕರು,ಯುವಕರು,ರೈತರು, ವಿದ್ಯಾರ್ಥಿಗಳ ಮೇಲೆ ಬದ್ಧತೆ ಇಲ್ಲವೆಂದ ಮೇಲೆ ಸಂಕಲ್ಪ ಯಾತ್ರೆ ಏಕೆ  ಮಾಡುತ್ತೀರಿ? ಎಂದು ಕಿಡಿ ಕಾರಿದರು.

 'ಸಾಲವನ್ನು ಮಾಡಿ ಬಜೆಟ್ ಮಾಡುವಂತಾಗಿದೆ.ಕೊಟ್ಟ ಮಾತಃನ್ನು ಉಳಿಸಿಕೊಳ್ಳಲಾಗದವರು ಅಧಿಕಾರದಲ್ಲಿರಲು ಲಾಯಕ್ಕಿಲ್ಲ. ಮಂಡಿಸುವ ಬಜೆಟ್ ಕೂಡ ಭಾಷಣಕ್ಕಷ್ಟೇ.ವಚನ ವಂಚನೆ ಮಾಡಿರುವುದೇ ಇವರ ಸಾಧನೆ.ರೂ 4 .5 ಸಾವಿರ ಕೋಟಿ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳಿಗೆ ಕೊಡದೆ ವಂಚಿಸಿದ್ದಾರೆ.ಶೇ 40 ಕಮಿಷನ್ ಸರ್ಕಾರ 'ಎಂದು ಹರಿಹಾಯ್ದರು.

  'ಕಾರ್ಪೊರೇಷನ್ ಬಿಲ್ಡಿಂಗ್ ಸೇರಿದಂತೆ ಎಲ್ಲಾ ಪಾರಂಪರಿಕ  ಕಟ್ಟಡಗಳನ್ನು ಅಡಮಾನ ಇಟ್ಟಿದ್ದರು.ಬಿಜೆಪಿಗೆ ಆಡಳಿತ ಮಾಡಲು ಬರುವುದಿಲ್ಲ. ಭ್ರಷ್ಟಾಚಾರ ಮಾಡುವುದಷ್ಟೇ ಗೊತ್ತು' ಎಂದರು.

  'ಬಸವಣ್ಣ, ಶಿವಕುಮಾರಸ್ವಾಮಿಜಿ,ಅಂಬೇಡ್ಕರ್ ,ಬಾಲಗಂಗಾಧರನಾಥಸ್ವಾಮಿ,ನಾರಾಯಣ ಗುರು ಸೇರಿದಂತೆ ಎಲ್ಲರ ಇತಿಹಾಸವನ್ನು ತಿರುಚಿದರು.'ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ,ಮುಖಂಡರಾದ ರಾಣಿ ಸತೀಶ್,ಸೂರಜ್ ಹೆಗಡೆ,ಮಂಜುಳಾ ರಾಜ್,ಎಚ್.ಎಂ ರೇವಣ್ಣ,ಎಂ.ಕೆ.ಸೋಮಶೇಖರ್ ,ರೋಸಿಜಾನ್,ವಕ್ತರರಾದ ಎಂ.ಲಕ್ಷ್ಮಣ,ಎಚ್.ಈ ವೆಂಕಟೇಶ್ ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ ವಿಜಯ್ ಕುಮಾರ್,ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ ಇದ್ದರು.


Post a Comment

Previous Post Next Post