ಎನ್.ಎಸ್.ಯು.ಐ. ಕಚೇರಿ ಉದ್ಘಾಟಿಸಿದ ಡಿಕೆಶಿ

     ಶಿವಮೊಗ್ಗ: ಎನ್.ಎಸ್.ಯು.ಐ. ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸುವುದಲ್ಲದೇ ಸಮಾಜದಲ್ಲಿ ವ್ಯಕ್ತಿಗತವಾಗಿ ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಅವರು ಇಂದು ಇಲ್ಲಿನ ಇಂದಿರಾಗಾಂಧಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಜಿಲ್ಲಾ ಎನ್.ಎಸ್.ಯು.ಐ. ಕಚೇರಿ ಉದ್ಘಾಟಿಸಿ ಮಾತನಾಡಿದರು.

ಎನ್.ಎಸ್.ಯು.ಐ. ಕಚೇರಿ 

ನಾನೂ ಕೂಡ ಎನ್.ಎಸ್.ಯು.ಐ.ನಿಂದ ರಾಜಕೀಯ ಜೀವನ ಆರಂಭಿಸಿದೆ. ಇಂದು ರಾಜಕೀಯವಾಗಿ ಎತ್ತರಕ್ಕೆ ಬೆಳೆದಿದ್ದೇನೆ. ಇದಕ್ಕೆ ಕಾರಣ ವಿದ್ಯಾರ್ಥಿ ದೆಸೆಯಲ್ಲಿಯೇ ನನ್ನಲ್ಲಿ ರಾಜಕೀಯ ಪ್ರಜ್ಞೆ ಮೂಡಿದ್ದು ಎಂದ ಅವರು, ಎನ್.ಎಸ್.ಯು.ಐ. ದೇಶದ ಮುಂದಿನ ನಾಯಕರುಗಳನ್ನು ಬೆಳೆಸುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಬೇರೆಲ್ಲೂ ಎನ್.ಎಸ್.ಯು.ಐ. ಇಷ್ಟು ಸುಸಜ್ಜಿತ ಕಚೇರಿ ಹೊಂದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ವಿದ್ಯಾರ್ಥಿ ಕಾಂಗ್ರೆಸ್ ಮುಖಂಡರು ಸಕ್ರಿಯವಾಗಿದ್ದು ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ನಾನೂ ಕೂಡ ಕಳೆದ 43 ವರ್ಷಗಳ ಹಿಂದೆ ಎನ್‍ಎಸ್‍ಯುಐ ಮೂಲಕವೇ ರಾಜಕೀಯ ಜೀವನ ಆರಂಭಿಸಿದ್ದೆ. ಯಾರು ಎನ್.ಎಸ್.ಯು.ಐ.ನಿಂದ ಬಂದಿದ್ದಾರೋ ಅವರು ಎಂದೂ ಕಾಂಗ್ರೆಸ್ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಹಾಗೆಯೇ ಪಕ್ಷದ ಬೇರುಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದರು.

ಇಂದು ಎನ್‍ಎಸ್‍ಯುಐ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ತಿಳಿಸಬೇಕು. ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಬೇಕು. ಜೊತೆ ಜೊತೆಗೇ ವಿದ್ಯಾಭ್ಯಾಸದಲ್ಲೂ ತೊಡಗಿ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.

ಮಾಜಿ ಸೂಡಾ ಅಧ್ಯಕ್ಷ ಎನ್. ರಮೇಶ್ ಮಾತನಾಡಿ, ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಯಾಕೆ ಮಾಡಿದರೆಂಬ ಬಗ್ಗೆ ಬಹುತೇಕ ಯುವಕರಿಗೆ ಗೊತ್ತಿಲ್ಲ. ಇಂದು ಮೋದಿ ಸರ್ಕಾರ ಎಲ್ಲ ರಂಗಗಳನ್ನೂ ಖಾಸಗೀಕರಣ ಮಾಡಿ ನಿರುದ್ಯೋಗ ಸೃಷ್ಟಿಸುತ್ತಿದೆ. ಇದು ಇನ್ನಷ್ಟು ಹೆಚ್ಚಾಗುತ್ತಾ ದೇಶವನ್ನು ಅಧೋಗತಿಗೆ ತಳ್ಳುತ್ತದೆ. ಬಿಜೆಪಿ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಕೋಮುವಾದದ ಮೂಲಕ ಬಡವರ ಮಕ್ಕಳನ್ನು ಬಲಿ ಪಡೆಯುತ್ತಿದ್ದಾರೆ. ಇದನ್ನು ಜನರಿಗೆ ತಿಳಿಸುವುದೇ ರಾಹುಲ್ ಅವರ ಯಾತ್ರೆಯ ಉದ್ದೇಶವಾಗಿತ್ತು. ಇಂದಿನ ದಿನಮಾನಗಳಲ್ಲಿ ರಾಹುಲ್ ಅವರಿಗೆ ರಾಜಕೀಯ ಶಕ್ತಿ ತುಂಬುವ ಮೂಲಕ ನಿಮ್ಮ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕಬೇಕು ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ ಶುಭ ಕೋರಿದರು. ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಚಿವ ಹೆಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್, ಮಾಜಿ ಸಂಸದ ಉಗ್ರಪ್ಪ, ಎನ್.ಎಸ್.ಯು.ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಮಾಜಿ ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಮುಖಂಡರಾದ ವಿಜಯಕುಮಾರ್ (ದನಿ), ಕೆ.ದೇವೇಂದ್ರಪ್ಪ, ಸಿ.ಜಿ. ಮಧುಸೂದನ್, ಕೆ. ಚೇತನ್, ಮಹಮ್ಮದ್ ನಿಹಾಲ್ ಮುಂತಾದವರಿದ್ದರು.

ಕಾರ್ಯಾಲಯ ಉದ್ಘಾಟನೆಗೆ ‘ಪ್ರಜಾಧ್ವನಿ ಯಾತ್ರೆ’ಯ ವಾಹನದಲ್ಲಿ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‍ರನ್ನು ಡೊಳ್ಳು ಬಾರಿಸಿ, ಪಟಾಕಿ ಸಿಡಿಸುವ ಮೂಲಕ ಸ್ವಾಗತಿಸಿ, ಎನ್.ಎಸ್.ಯು.ಐ. ಕಾರ್ಯಕರ್ತರು ಘೋಷಣೆ ಕೂಗಿದರು

Post a Comment

Previous Post Next Post