ವಿಧಾನಸಭಾ ಚುನಾವಣಾ ಕಣಕ್ಕಿಳಿದ ರಾಜಕೀಯ ಪಕ್ಷಗಳ ‘ಸೈಬರ್‌ ಸೈನ್ಯಗಳು'

 ಇಂದಿನ ಚುನಾವಣೆಗಳು ಕೇವಲ ಭಾಷಣ, ಸಮಾವೇಶ, ಮೈದಾನ ರಾಜಕಾರಣಕ್ಕಷ್ಟೇ ಸೀಮಿತವಾಗಿಲ್ಲ. ಕ್ರಿಯಾಶೀಲ ಮನಸ್ಸಿನ ಅದ್ಭುತ ಯೋಚನೆಗಳೂ ಪ್ರಮುಖ ಅಸ್ತ್ರಗಳಾಗಿ ಬಳಕೆಯಾಗುತ್ತವೆ. ಇಂತಹ ಪ್ರಬಲ ಅಸ್ತ್ರಗಳನ್ನು ಯಾವ ಸಮಯದಲ್ಲಿ ಬಳಸುತ್ತಾರೆ...

                                                                ಸಂಗ್ರಹ ಚಿತ್ರ

By : Rekha.M
Online Desk

ಬೆಂಗಳೂರು: ಇಂದಿನ ಚುನಾವಣೆಗಳು ಕೇವಲ ಭಾಷಣ, ಸಮಾವೇಶ, ಮೈದಾನ ರಾಜಕಾರಣಕ್ಕಷ್ಟೇ ಸೀಮಿತವಾಗಿಲ್ಲ. ಕ್ರಿಯಾಶೀಲ ಮನಸ್ಸಿನ ಅದ್ಭುತ ಯೋಚನೆಗಳೂ ಪ್ರಮುಖ ಅಸ್ತ್ರಗಳಾಗಿ ಬಳಕೆಯಾಗುತ್ತವೆ. ಇಂತಹ ಪ್ರಬಲ ಅಸ್ತ್ರಗಳನ್ನು ಯಾವ ಸಮಯದಲ್ಲಿ ಬಳಸುತ್ತಾರೆ, ಅದರ ಪರಿಣಾಮಗಳು ಏನಾಗಬಹುದು ಎಂಬ ನಿಖರ ಲೆಕ್ಕಾಚಾರ ಇದ್ದರಷ್ಟೇ ಚುನಾವಣೆಗಳ ದಿಕ್ಕು– ದೆಸೆಗಳನ್ನು ಬದಲಿಸಲು ಸಾಧ್ಯ.

ಇದೊಂದು ರೀತಿಯಲ್ಲಿ ‘ಮೈಂಡ್‌ ಗೇಮ್‌’. ಮಾಹಿತಿ ತಂತ್ರಜ್ಞಾನ ಇದಕ್ಕೆ ಪ್ರಮುಖ ವೇದಿಕೆ. ಸಾಮಾಜಿಕ ಜಾಲ ತಾಣಗಳು ಇದರ ‘ಅಸ್ತ್ರ’ಗಳು. ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಣಕ್ಕೆ ಈಗಾಗಲೇ ರಾಜಕೀಯ ಪಕ್ಷಗಳ ‘ಸೈಬರ್‌ ಸೈನ್ಯಗಳು’ ಇಳಿದಿದ್ದು, ತಂತ್ರಗಳು ಮತ್ತು ಪ್ರತಿತಂತ್ರಗಳನ್ನು ರೂಪಿಸುತ್ತಿದ್ದಾರೆ.

ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ತಮ್ಮದೇ ಆದ ಸೈಬರ್‌ ಸೈನ್ಯಗಳ ತಂಡವನ್ನು ಹೊಂದಿದ್ದು, ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುವಲ್ಲಿ ನಿರತವಾಗಿವೆ. ಈ ತಂಡಗಳಲ್ಲಿ ವೃತ್ತಿಪರರು ಮತ್ತು ಸ್ವಯಂಸೇವಕರಿದ್ದು,  ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ಕೆಲಸ ಮಾಡುತ್ತಿವೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಕ್ರಮವಾಗಿ 18-20 ಮತ್ತು 25-30 ಸದಸ್ಯರ ತಂಡವನ್ನು ಹೊಂದಿದ್ದು. ಬಿಜೆಪಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ತಂಡಗಳನ್ನು ಸ್ಥಾಪಿಸಿದೆ, ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಂದೊಂದು ತಂಡವನ್ನು ರಚಿಸಿಕೊಂಡಿದೆ.

ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ಅಧ್ಯಕ್ಷ, ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷವು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ, ಆದರೆ, ಈ ಬಾರಿ ಆಕ್ರಮಣಕಾರಿ ರೀತಿಯಲ್ಲಿ ಕೆಲಸ ಮಾಡಲಿದೆ ಹೇಳಿ,ಸ ಶೇ.40 ಕಮಿಷನ್ ಸರ್ಕಾರ, ಪೇಸಿಎಂ' ಉದಾಹರಣೆಗಳನ್ನು ಉಲ್ಲೇಖಿಸಿದರು.

ನಮ್ಮ ತಂಡವು ಬಿಜೆಪಿ ಮತ್ತು ಅದರ ನಿರೂಪಣೆಗಳು ಮತ್ತು ಸಿದ್ಧಾಂತಗಳನ್ನು ಬಹಿರಂಗಪಡಿಸುತ್ತಿದೆ, ಈ ಹಿಂದೆ ನಾವು ಅದನ್ನು ಪರಿಣಾಮಕಾರಿಯಾಗಿ ಮಾಡುತ್ತಿರಲಿಲ್ಲ. ಇದೀಗ ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಬಹಿರಂಗಪಡಿಸುತ್ತಿದ್ದೇವೆ. ಆಕರ್ಷಕ ನುಡಿಗಟ್ಟುಗಳ ಮೂಲಕ ಜನರಿಗೆ ತಿಳಿಸುತ್ತಿದ್ದೇವೆ. ಈ ಪೋಸ್ಟ್ ಗಳು ಸತ್ಯ ಹಾಗೂ ಅಂಕಿಅಂಶಗಳನ್ನು ಒಳಗೊಂಡಿರುತ್ತದೆ. ಸಾಕಷ್ಟು ಪರಿಶೀಲನೆ ಬಳಿಕವೇ ಪೋಸ್ಟ್ ಗಳನ್ನು ಮಾಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇನ್ನು ಜೆಡಿಎಸ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜನಸಾಮಾನ್ಯರನ್ನು ತಲುಪುವಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಗಮನಹರಿಸುತ್ತಿದ್ದು, ಸಂಘಟಿತವಾಗಿದೆ.

ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದ ಉಸ್ತುವಾರಿ ಕೆ.ಎ.ತಿಪ್ಪೇಸ್ವಾಮಿ ಅವರು ಮಾತನಾಡಿ, ತಜ್ಞರನ್ನು ನೇಮಿಸಿ ತಂಡದ ಎಲ್ಲ ಸದಸ್ಯರಿಗೆ ತರಬೇತಿ ನೀಡಲಾಗಿದೆ. “ಈ ಬಾರಿ ನಾವು ಹೆಚ್ಚು ಸಂಘಟಿತರಾಗಿದ್ದೇವೆ ಮತ್ತು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಅಭ್ಯರ್ಥಿಗಳ ಪ್ರೊಫೈಲ್‌ಗಳನ್ನು ಕ್ರಿಯೇಟ್ ಮಾಡಲಾಗಿದ್ದು, ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಪೋಸ್ಟ್ ಗಳನ್ನು ಮಾಡುವುದರತ್ತ ಗಮನಹರಿಸಿದ್ದೇವೆಂದು ಹೇಳಿದ್ದಾರೆ.

ಇತರೆ ಪಕ್ಷಗಳು ಸಾಮಾಜಿಕ ಜಾಲತಾಣಗಳ ಮೂಲತ ತಮ್ಮ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದರೆ, ನಾವು ಈ ನೆಲ, ಜಲ ಮತ್ತು ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಗೆ ಸಂಬಂಧಿಸಿದ ವಿಷಯಗಳಂತಹ ನಮ್ಮ ಆದ್ಯತೆಗಳಿಗೆ ನೀಡುತ್ತಿದ್ದೇವೆಂದು ತಿಳಿಸಿದ್ದಾರೆ.

ಬಿಜೆಪಿಯ ರಾಜ್ಯ ಡಿಜಿಟಲ್ ಮೀಡಿಯಾ ವಿಭಾಗದ ಮುಖ್ಯಸ್ಥ ವಿಕಾಸ್ ಪುತ್ತೂರು ಮಾತನಾಡಿ, ಪಕ್ಷವು ರಾಜ್ಯಾದ್ಯಂತ 10 ವಿಭಾಗಗಳನ್ನು ರಚಿಸಿದೆ ಮತ್ತು ಪ್ರತಿ ಜಿಲ್ಲೆಯಲ್ಲಿ ಡಿಜಿಟಲ್ ಮಾಧ್ಯಮ ಸಮಾವೇಶಗಳನ್ನು ನಡೆಸುತ್ತಿದೆ ಎಂದಿದ್ದಾರೆ.

“ನಮ್ಮ ಅಭಿಯಾನದ ಗಮನವು ನಮ್ಮ ಸರ್ಕಾರದ ಸಾಧನೆಗಳು ಮತ್ತು ಅಭಿವೃದ್ಧಿಯ ದೃಷ್ಟಿಯ ಮೇಲೆ ನೆಟ್ಟಿದೆ. ನಾವು ಇತರ ಪಕ್ಷಗಳು ಅಥವಾ ನಾಯಕರ ಮೇಲೆ ದಾಳಿ ಮಾಡುವುದನ್ನು ನಿಯಂತ್ರಿಸುತ್ತಿದ್ದೇವೆ. ಕಾಂಗ್ರೆಸ್‌ಗಿಂತ ಮೂರು ಪಟ್ಟು ಹೆಚ್ಚು ಮತ್ತು ಜೆಡಿಎಸ್‌ಗಿಂತ 10 ಪಟ್ಟು ಹೆಚ್ಚು ಜನರನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ರಾಜ್ಯದ ಟಾಪ್ 10 ರಾಜಕಾರಣಿಗಳನ್ನು ನೋಡಿದರೆ, ಆರು ಮಂದಿ ನಾಯಕರು ಬಿಜೆಪಿಯವರೇ ಇದ್ದಾರೆಂದು ಮಾಹಿತಿ ನೀಡಿದ್ದಾರೆ.




Post a Comment

Previous Post Next Post