ಆ್ಯಂಟಿಬಯೊಟಿಕ್‌ ಸಲಹೆಗೆ ವೈದ್ಯರು ಕಾರಣ ವಿವರಿಸುವುದು ಕಡ್ಡಾಯ: ಕೇಂದ್ರದಿಂದ ಬಿಗಿ ನಿಯಮ

 ಹೊಸದಿಲ್ಲಿ: ದೇಶಾದ್ಯಂತ ಆ್ಯಂಟಿಬಯೊಟಿಕ್‌ ಅಥವಾ ಆ್ಯಂಟಿ ಮೈಕ್ರೊಬಿಯಲ್‌ ಔಷಧಿಗಳ ದುರ್ಬಳಕೆ ತಡೆಗೆ ಮುಂದಾಗಿರುವ ಕೇಂದ್ರ ಸರಕಾರವು ರೋಗಿಗಳಿಗೆ ವೈದ್ಯರು ಬರೆಯುವ 'ಪ್ರಿಸ್ಕ್ರಿಪ್ಷನ್‌'ನಲ್ಲಿ ನಿಖರವಾಗಿ ರೋಗಲಕ್ಷಣಗಳನ್ನು ಉಲ್ಲೇಖಿಸುವಂತೆ ಸೂಚಿಸಿದೆ.


ಹೆಚ್ಚುತ್ತಿರುವ ಆ್ಯಂಟಿಬಯೊಟಿಕ್‌ ಬಳಕೆಯ ಅಪಾಯಕಾರಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಈ ಮಹತ್ವದ ಹೆಜ್ಜೆ ಅನುಸರಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿನ ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶನಾಲಯ (ಡಿಜಿಎಚ್‌ಎಸ್‌), ಈ ಸಂಬಂಧ ದೇಶದ ಎಲ್ಲ ಮೆಡಿಕಲ್‌ ಕಾಲೇಜುಗಳು , ವೈದ್ಯಕೀಯ ಸಂಘಟನೆಗಳು ಹಾಗೂ ಔಷಧ ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ನಿಯಮ ಪಾಲನೆಗೆ ಸೂಚನೆ ನೀಡಿದೆ.

ಡಿಜಿಎಚ್‌ಎಸ್‌ ನಿರ್ದೇಶಕ ಡಾ. ಅತುಲ್‌ ಗೊಯೆಲ್‌ ಅವರು ವೈದ್ಯರನ್ನು ಉದ್ದೇಶಿಸಿ ನೀಡಿರುವ ಸೂಚನೆಯಂತೆ,'' ಅರ್ಹ ಹಾಗೂ ನೋಂದಾಯಿತ ವೈದ್ಯರು ಬರೆಯುವ ಮಾತ್ರೆಗಳ ಸಂಬಂಧಿತ ಚೀಟಿ ಅಥವಾ ಪ್ರಿಸ್ಕ್ರಿಪ್ಷನ್‌ಗಳಲ್ಲಿ ರೋಗಿಯಲ್ಲಿ ಕಂಡುಬಂದಿರುವ ರೋಗಲಕ್ಷಣಗಳನ್ನು ವಿಸ್ತೃತವಾಗಿ ನಮೂದಿಸಬೇಕು. ಜತೆಗೆ, ರೋಗಲಕ್ಷಣಕ್ಕೆ ಕಾರಣಗಳನ್ನು ಕೂಡ ಸೂಚಿಸಬೇಕು,'' ಎಂದಿದ್ದಾರೆ.

ವೈದ್ಯರು ಮಾತ್ರವಲ್ಲದೆ, ಔಷಧ ವ್ಯಾಪಾರಿಗಳು ಕೂಡ ಔಷಧಗಳು ಹಾಗೂ ಸೌಂದರ್ಯವರ್ಧಕ ನಿಯಮಗಳ ಎಚ್‌ ಮತ್ತು ಎಚ್‌1 ಪರಿಚ್ಛೇದಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಅಧಿಕೃತ ಪ್ರಿಸ್ಕ್ರಿಪ್ಷನ್‌ಗಳ ಆಧಾರದಲ್ಲಿ ಮಾತ್ರ ಆ್ಯಂಟಿಬಯೊಟಿಕ್‌ಗಳನ್ನು ಮಾರಾಟ ಮಾಡಬೇಕು ಎಂದು ಹೇಳಿದ್ದಾರೆ.

ಅನಗತ್ಯವಾಗಿ ಆ್ಯಂಟಿಬಯೊಟಿಕ್‌ ಅಥವಾ ಆ್ಯಂಟಿ ಮೈಕ್ರೊಬಿಯಲ್‌ ಔಷಧಗಳನ್ನು ಸೇವಿಸುವುದರಿಂದ ಜನರಲ್ಲಿ ಆ್ಯಂಟಿ ಮೈಕ್ರೊಬಿಯಲ್‌ ನಿರೋಧಕತೆಯು ಅಗತ್ಯವಿರುವ ಸಂದರ್ಭದಲ್ಲಿ ಕಾರ್ಯನಿರ್ವಹಿಸಲ್ಲ. ಇದರಿಂದ ಸಾಂಕ್ರಾಮಿಕ ರೋಗದ ಹಾವಳಿ ವೇಳೆ ಆ್ಯಂಟಿಬಯೊಟಿಕ್‌ಗಳ ಪರಿಣಾಮ ಕ್ಷೀಣಿಸಲಿದೆ ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಎಚ್ಚರಿಸಿದೆ.

‘ಜನಪರ ಕಾಳಜಿಯಿದ್ದರೆ ಬಡತನ ನಿವಾರಣೆ’

ಹೊಸದಿಲ್ಲಿ: ‘‘ಕೇಂದ್ರ ಸರಕಾರದ ಪಾರದರ್ಶಕ ಆಡಳಿತ, ಪ್ರಮಾಣಿಕ ಪ್ರಯತ್ನ, ಜನರ ಸಹಭಾಗಿತ್ವದಿಂದ ಕಳೆದ ಒಂದು ದಶಕದಲ್ಲಿ ದೇಶದ 25 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರೆ,’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ವಿಕಸಿತ ಭಾರತ ಸಂಕಲ್ಪ’ ಯಾತ್ರೆಯ ಫಲಾನುಭವಿಗಳ ಜತೆ ಗುರುವಾರ ನಡೆದ ಸಂವಾದದಲ್ಲಿ (ವರ್ಚುವಲ್‌) ಮಾತನಾಡಿದ ಮೋದಿ ಅವರು, ‘‘ಜನಪರ ಕಾಳಜಿಯಿಂದ ಕೆಲಸ ಮಾಡುವ ಸರಕಾರದ ಯೋಜನೆಗಳನ್ನು ಸರಿಯಾಗಿ ಜನರಿಗೆ ತಲುಪಿಸಿದರೆ ಬಡತನ ತನ್ನಿಂದ ತಾನೇ ದೂರಾಗಲಿದೆ,’’ ಎಂದು ಹೇಳಿದರು.

‘‘ಬಡವರಿಗೆ ದೇಶದ ಸಂಪನ್ಮೂಲಗಳನ್ನು ತಲುಪಿಸಿದರೆ ಬಡತನವನ್ನು ನಿವಾರಣೆ ಮಾಡಬಹುದು ಎಂಬುದನ್ನು ಕಳೆದ ಒಂದು ದಶಕದಲ್ಲಿ ಸರಕಾರ ಕೈಗೊಂಡ ಕ್ರಮಗಳು ತೋರಿಸಿಕೊಟ್ಟಿವೆ,’’ ಎಂದು ಮೋದಿ ಹೇಳಿದರು.

ಇತ್ತೀಚಿಗೆ ಪ್ರಕಟವಾದ ನೀತಿ ಆಯೋಗದ ವರದಿ ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು. ‘‘ಬಡತನ ನಿವಾರಣೆ ಭಾರತ ಸರಕಾರ ಕೈಗೊಂಡ ಕ್ರಮಗಳು ಜಾಗತಿಕವಾಗಿ ಮಾದರಿಯಾಗಿವೆ. ಬಡವರಿಗೆ ಸಹಾಯ ಮಾಡುವ ವಿಚಾರದಲ್ಲಿ ಸರಕಾರದ ಉಪಕ್ರಮಗಳು ಜಗತ್ತಿನ ಗಮನ ಸೆಳೆದಿವೆ,’’ ಎಂದು ಹೇಳಿದರು.

ವಿಶ್ವಾಸ ರಥ

‘‘ಕಳೆದ ಎರಡು ತಿಂಗಳಿಂದ ನಡೆದಿರುವ ‘ವಿಕಸಿತ ಭಾರತ ಸಂಕಲ್ಪ’ ಯಾತ್ರೆ ಶೇ. 80ರಷ್ಟು ಪಂಚಾಯಿತಿಗಳನ್ನು ತಲುಪಿದೆ. ಇದೊಂದು ಜನರ ಚಳವಳಿಯಾಗಿ ರೂಪಾಂತರಗೊಂಡಿದ್ದು, ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ತಲುಪಿಸಲು ಸಹಕಾರಿಯಾಗಿದೆ,’’ ಎಂದು ಮೋದಿ ವಿಶ್ಲೇಷಿಸಿದರು.

‘‘ಸರಕಾರದ ‘ವಿಕಾಸ ರಥ’ ಯಾತ್ರೆ ‘ವಿಶ್ವಾಸ ರಥ’ವಾಗಿ ಬದಲಾಗಿದೆ. ಕೊನೆಯ ವ್ಯಕ್ತಿಯೂ ಯೋಜನೆಯ ವ್ಯಾಪ್ತಿಗೆ ತರುವ ಕೆಲಸ ಮಾಡಿರುವ ಯಾತ್ರೆ ಜನರಲ್ಲಿ ಸರಕಾರದ ಬಗ್ಗೆ ವಿಶ್ವಾಸ ತುಂಬುವಲ್ಲಿ ಸಫಲವಾಗಿದೆ,’’ ಎಂದು ಮೋದಿ ಹೇಳಿದರು.

Post a Comment

Previous Post Next Post