ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಪೊಲೀಸರ ವಶಕ್ಕೆ!

 ದಾವಣಗೆರೆ : ಹುಬ್ಬಳ್ಳಿಯಲ್ಲಿ ಕರ ಸೇವಕನ ಬಂಧನದ ಖಂಡಿಸಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯಹೊನ್ನಾಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಅಲ್ಲದೇ, ನಾನು ಕೂಡ ಕರಸೇವಕ ನನ್ನನ್ನು ಬಂಧಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


ರೇಣುಕಾಚಾರ್ಯರಿಗೆ ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದರು. ಈ ಸಂದರ್ಭದಲ್ಲಿ ಪೊಲೀಸರ ಹಾಗೂ ರೇಣುಕಾಚಾರ್ಯ ನಡುವೆ ವಾಗ್ವಾದ ನಡೆಯಿತು. ಅಲ್ಲದೇ ಪೊಲೀಸ್ ಠಾಣೆಯ ಬಾಗಿಲಿನಲ್ಲೇ ತಡೆ ಹಿಡಿದು ವಶಕ್ಕೆ ಪಡೆದರು. ಪೊಲೀಸ್‌ ವಾಹನದಲ್ಲಿ ಮಾಜಿ ಶಾಸಕರನ್ನು ಸೇರಿದಂತೆ ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಇತರೆ ಸ್ಥಳಕ್ಕೆ ಕರೆದೊಯ್ಯಿದರು.


ಈ ವೇಳೆ ಮಾಜಿ ಶಾಸಕ ರೇಣುಕಾಚಾರ್ಯ ಮಾತನಾಡಿ, " ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಸರ್ಕಾರ.

ಅಮಾಯಕ ಕರ ಸೇವಕನನ್ನು ಪೊಲೀಸರು ಬಂಧಿಸಿದ್ದಾರೆ. ನಿಮಗೆ ಎಷ್ಟು ತಾಕತ್ತು ಇದೆ ಎಂದು ನಾವು ನೋಡುತ್ತೇವೆ.
ಹಿಂದೂಗಳನ್ನು ಬಂಧಿಸುತ್ತೀರಿ, ಗಲಭೆ ಮಾಡಿದವರನ್ನು ನಮ್ಮ ಬ್ರದರ್ಸ್ ಅಮಾಯಕರು ಅಂತ ಹೇಳುತ್ತೀರಿ.
ನಿಮಗೆ ನಾಚಿಕೆಯಾಗುವುದಿಲ್ವಾ ಸಿದ್ದರಾಮಯ್ಯ ಡಿಕೆಶಿಯವ್ರೆ" ಎಂದರು.

ನಿಮ್ಮದು ತಾಲಿಬಾನ್‌ ಸರ್ಕಾರವೇ

ನಾಳೆಯಿಂದ ನಮ್ಮ ಮನೆಯಲ್ಲಿರುವ ಮಕ್ಕಳು ಮಹಿಳೆಯರು ಕೂಡ ಬೀದಿಗೆ ಬಂದು ಹೋರಾಟ ಮಾಡುತ್ತೇವೆ. ಪೊಲೀಸರು ಕೂಡ ಹಿಂದೂಗಳೇ ಆದರೆ ನಮ್ಮ ಹಿಂದೂ ಕಾರ್ಯಕರ್ತರಿಗೆ ನೋಟೀಸ್ ನೀಡದೆ ಬಂಧಿಸುತ್ತಿದ್ದೀರಿ. ನಿಮ್ಮ ಸರ್ಕಾರ ತಾಲಿಬಾನ್ ಸರ್ಕಾರವೇ ಎಂದು ರೇಣುಕಾಚಾರ್ಯ ಕಿಡಿಕಾರಿದರು.

ತಾಕತ್ತಿದ್ದರೆ ಒಬ್ಬ ಹಿಂದು ಕಾರ್ಯಕರ್ತರನ್ನು ಮುಟ್ಟಿ

ಹತ್ತು ಸಾವಿರ ಕೋಟಿ ಮುಸ್ಲಿಂಮರಿಗೆ ಅಂತ ಹೇಳ್ತಾರೆ. ಇದು ಹಿಂದೂ ವಿರೋಧಿ ಸರ್ಕಾರ. ಬರಗಾಲದ ಪರಿಹಾರಕ್ಕೆ 180 ಕೋಟಿ ಬಿಡುಗಡೆ ಮಾಡಿದ್ದಾರೆ. ಆದರೆ, ಮುಸ್ಲಿಮರಿಗೆ ಹತ್ತು ಸಾವಿರ ಕೋಟಿ ಬಿಡುಗಡೆ ಮಾಡ್ತಿವಿ ಅಂತ ಹೇಳ್ತಾರೆ. ತಾಕತ್ತು ಇದ್ದರೆ ಇನ್ಮುಂದೆ ಒಬ್ಬ ಹಿಂದು ಕಾರ್ಯಕರ್ತರನ್ನು ಮುಟ್ಟಿ ನೋಡೋಣಾ ಎಂದು ಸವಾಲು ಹಾಕಿದರು.

ನಾವು ಇವತ್ತಿಂದ ಸಂಕಲ್ಪ ಮಾಡುತ್ತೇವೆ. ಈ ತಾಲಿಬಾನ್ ಸರ್ಕಾರದ ವಿರುದ್ದ ಹೋರಾಟ ಮಾಡುತ್ತೇವೆ. ನಮ್ಮ ಹಿಂದೂ ಕಾರ್ಯಕರ್ತರನ್ನು ಸುಳ್ಳು ಕೇಸ್ ದಾಖಲು ಮಾಡಿ ಬಂಧಿಸಿದರೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು‌.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶಭಕ್ತರು, ಕರಸೇವಕರ ಪರವಾಗಿಯೋ ಅಥವಾ ಭಯೋತ್ಪಾದಕರ ಪರವಾಗಿದ್ದರೋ ಎನ್ನುವುದನ್ನು ದೇಶದ ಜನತೆಗೆ ಸ್ಪಷ್ಟೀಕರಣ ನೀಡಬೇಕು . ಕರ ಸೇವಕರು ಕ್ರಮಿನಲ್ ಎಂದು ಹೇಳುತ್ತಾರೆ. ದೇಶಭಕ್ತರು ಕ್ರಿಮಿನಲ್ ಗಳಾದರೆ, ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರು, ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಿದವರು, ಗೋವುಗಳನ್ನು ಕಸಾಯಿ ಖಾನೆಗೆ ಸಾಗಿಸುವವರು ದೇಶಭಕ್ತರಾ ಎಂದು ಪ್ರಶ್ನಿಸಿದರು.

ದೇಶದಲ್ಲಿ ಶಾಂತ ವಾತಾವರಣ ಇದೆ

ಬಿ.ಕೆ ಹರಿಪ್ರಸಾದ್ ಅವರು ಗೋದ್ರಾ ಘಟನೆ ರಾಜ್ಯದಲ್ಲಿ ಮತ್ತೊಮ್ಮೆ ಮರುಕಳಿಸಲಿದೆ ಎನ್ನುತ್ತಾರೆ, ಆದರೆ, ನಿಮಗೆ ತಿಳಿದಿರಲಿ, ಗೋದ್ರಾ ಘಟನೆಗೆ ಮೋದಿ ಕಾರಣ ಅಲ್ಲ. ಬೇರೆಯವರು ಎಂದ ಅವರು, ಈ ದೇಶದಲ್ಲಿ ಶಾಂತ ವಾತಾವರಣ ಇದೆ. ಅದನ್ನು ಕೆಡಿಸಲು‌ ಕಾಂಗ್ರೆಸ್ ಹುನ್ಮಾರ ನಡೆಸುತ್ತಿದೆ ಎಂದು ‌ಆರೋಪಿಸಿದರು.

ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಕುತಂತ್ರದಿಂದ ಗುಂಪುಗಾರಿಕೆ ನಡೆಸಲಾಗುತ್ತಿದೆ. ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ನಿಂದ ಸೈಡ್ ಲೈನ್ ಮಾಡಲಾಗಿದೆ. ಇದರಿಂದ ಬೇಸತ್ತಿರುವ ಹರಿಪ್ರಸಾದ್, ಒಳ ಹೊಡೆತ ಪಡೆಯುತ್ತಿದ್ದಾರೆ. ಒಂದೆಡೆ ಸಿದ್ದರಾಮಯ್ಯರನ್ನು ಕೆಳಗಿಸಲು, ಮತ್ತೊಂದೆಡೆ ಮುಂದಿನ 2 ವರ್ಷಗಳ ನಂತರ ಡಿ.ಕೆ.ಶಿವಕುಮಾರ್ ಆವರಿಗೆ ಸಿಎಂ ಸ್ಥಾನ ಬಿಟ್ಟು ಕೊಡಬೇಕೆನ್ನುವ ಕಾರಣಕ್ಕೆ ಈ ರೀತಿಯ ಹೇಳಿಕೆಯನ್ನು ನೀಡಲಾಗುತ್ತಿದೆಯೋ ಅನುಮಾನ ಮೂಡುತ್ತಿದ್ದು, ಕಾಂಗ್ರೆಸ್ ಮನೆಯೊಂದು ಹಲವು ಬಾಗಿಲುಗಳಂತೆ‌ ಆಗಿದೆ ಎಂದರು.

ಬಹಿರಂಗ ಸಮಾವೇಶಗಳಲ್ಲಿ ‌ಯತೀಂದ್ರ ಸಿದ್ದರಾಮಯ್ಯ ಅವರು, ಭಾರತ ದೇಶ ಹಿಂದೂ ರಾಷ್ಟ್ರವನ್ನಾಗಲು ಬಿಡಬಾರದು ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಅವರು ತಿಳಿದಿರಲಿ, ಮುಂದಿನ ದಿನಗಳಲ್ಲಿ ಭಾರತ ಅಖಂಡ ದೇಶವಾಗಲಿ ಎನ್ನುವುದು ನಮ್ಮ ಕನಸು ಎಂದು ಹೇಳಿದರು.

ಸಾವಿರಾರು ವರ್ಷದ ಇತಿಹಾಸದ ಶ್ರೀರಾಮ ಮಂದಿರ ಯಾವ ಸರ್ಕಾರದಿಂದಲೂ ನಿರ್ಮಾಣ ಆಗಿಲ್ಲ. ಜನರರಿಂದ ನಿರ್ಮಾಣ ಆಗಿದೆ. ಸುಪ್ರೀಂ ಕೋರ್ಟ್ ನಿರ್ಧೆಶನ ನೀಡಿದ ಮೆಲೆಯೇ ಅದರ ತೀರ್ಪಿನ ಆಧಾರದಲ್ಲಿ ನಿರ್ಮಾಣವಾಗಿದೆ. ಅದರೂ ಅದು ವಿವಾದಿತ ಜಾಗ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು ಸುಪ್ರೀಂ ಕೊರ್ಟ್ ಗಿಂತ ದೊಡ್ಡವರಲ್ಲ ಸಿದ್ದರಾಮಯ್ಯ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ‌40ರಿಂ‌ದ 50 ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ. ಶ್ರೀಕಾಂತ್ ಪೂಜಾರಿಯನ್ನು 30ವರ್ಷದ ಬಳಿಕ ಬಂಧಿಸಿದ್ದು ಖಂಡನೀಯ. ಹಿಂದೂ ಪರ ಹೋರಾಟಗಾರರ ವಿರುದ್ದ ಸರಕಾರ ಆಡಳಿತ ಮಾಡುತ್ತಿದೆ.‌ ಇದೇ ರೀತಿ ನೀವು ಅಡಳಿತ ನಡೆಸಿದರೆ, ಹಿಂದೂಗಳು ದಂಗೆ ಏಳಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮಭಕ್ತರು, ಹಿಂದುತ್ವ ರಕ್ಷಣೆ ಮಾಡದ ದೇಶಭಕ್ತರನ್ನು ಬಂಧಿಸಿದ್ದು, ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿಯಲ್ಲಿ ದಾಂಧಲೆ ನಡೆಸಿ, ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ ಭಯೋತ್ಪಾದಕರನ್ನು ರಕ್ಷಿಸುವ ಮೂಲಕ ರಾಜ್ಯದಲ್ಲಿ ಷರಿಯಾ ಕಾನೂನು ತರಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

Post a Comment

Previous Post Next Post