ಶಿವಮೊಗ್ಗ: ಹನಿ ಟ್ರ್ಯಾಪ್ ಮೂಲಕ ವ್ಯಕ್ತಿಯ ಚಿನ್ನಾಭರಣ ಕಳವು ಮಾಡಿದ ಮಹಿಳೆ!

 ಶಿವಮೊಗ್ಗ ನಗರದ ವಾಸಿಯೊಬ್ಬರು ದಿನಾಂಕ: 15-12-2023 ರಂದು ಮದ್ಯಾಹ್ನ ಶಿವಮೊಗ್ಗಕ್ಕೆ ಬರಲು ಹೊನ್ನಾವರದಿಂದ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಹೊರಟಿದ್ದು, ಬಸ್ ನಲ್ಲಿ ಇವರ ಪಕ್ಕ ಸುಮಾರು 30 ರಿಂದ 35 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕುಳಿತುಕೊಂಡಿದ್ದು,  ಇಬ್ಬರಿಗೂ ಪರಸ್ಪರ ಪರಿಚಯವಾಗಿರುತ್ತದೆ. ನಂತರ ಇಬ್ಬರೂ ಮಾತನಾಡಿಕೊಂಡು ಬರುವಾಗ ಮಹಿಳೆಯು ಸದರಿ ವ್ಯಕ್ತಿಗೆ ಲಾಡ್ಜ್ ಗೆ ಹೋಗೋಣ ಅಂತ ಹೇಳಿ ಶಿವಮೊಗ್ಗ ನಗರದ ಎನ್.ಟಿ ರಸ್ತೆ ಸವಿನೆನಪು ಲಾಡ್ಜ್ ಗೆ ಕರೆದುಕೊಂಡು ಹೋಗಿ, ಆ ವ್ಯಕ್ತಿಯ  ಮೈಮೇಲಿರುವ ಬಂಗಾರದ ಒಡವೆಗಳನ್ನು ತೆಗೆದು ಬ್ಯಾಗ್ ನಲ್ಲಿ ಇಡಲು ಹೇಳಿ ನಂತರ ನನಗೆ ಬಾಯಾರಿಕೆ ಆಗಿದೆ ಕುಡಿಯಲು ನೀರು ಮತ್ತು ಊಟ ತನ್ನಿ ಎಂದು ಹೇಳಿದ್ದರಿಂದ ಆತನು ಲಾಡ್ಜ್ ನಿಂದ ಹೊರಗಡೆ ಬಂದಾಗ ಆಕೆಯು ಬ್ಯಾಗ್ ನಲ್ಲಿಟ್ಟಿದ್ದ ಬಂಗಾರದ ಒಡವೆಗಳು ಮತ್ತು ನಗದು ಹಣವನ್ನು ಮೋಸ ಮಾಡಿ, ಕಳ್ಳತನ ಮಾಡಿಕೊಂಡು ಹೋಗಿರುತ್ತಾಳೆಂದು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0444/2023  ಕಲಂ 380, 420 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.


 ಪ್ರಕರಣದಲ್ಲಿ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಶ್ರೀ ಕಾರಿಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2  ರವರ ಮಾರ್ಗದರ್ಶನದಲ್ಲಿ ಶ್ರೀ ಬಾಲರಾಜ್ ಬಿ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ರವಿ ಪಾಟೀಲ್, ಪಿಐ ದೊಡ್ಡಪೇಟೆ ರವರ ನೇತೃತ್ವದ  ಶ್ರೀನಿವಾಸ್ ಪಿಎಸ್ಐ  ಮತ್ತು ಸಿಬ್ಬಂಧಿಗಲಾದ ಹೆಚ್ ಸಿ - ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ, ಸಿಪಿಸಿ -  ಚಂದ್ರಾನಾಯ್ಕ, ನಿತಿನ್, ಪುನಿತ್,  ಹೇಮಂತ್ ಮತ್ತು ಸುಮಿತಾ ಬಾಯಿ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 

ಸದರಿ ತನಿಖಾ ತಂಡವು ದಿಃ 06-01-2024  ರಂದು ಪ್ರಕರಣದ ಆರೋಪಿ ರೂಪಾಶ್ರೀ ಪಿ.ಎಸ್,  33 ವರ್ಷ, ಆಯನೂರು ಶಿವಮೊಗ್ಗ ಈಕೆಯನ್ನು ದಸ್ತಗಿರಿ ಮಾಡಿ ಆರೋಪಿತಳಿಂದ ಮೇಲ್ಕಂಡ ಪ್ರಕರಣ ಮತ್ತು ಶಿವಮೊಗ್ಗ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣನಲ್ಲಿ  ಕಳ್ಳತನವಾದ ಬಗ್ಗೆ   ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವರದಿಯಾದ 03 ಕಳ್ಳತನ ಪ್ರಕರಣ ಸೇರಿ ಒಟ್ಟು 04 ಪ್ರಕರಣಗಳಿಗೆ ಸಂಬಂಧಿಸಿದಂತೆ, ಅಂದಾಜು ಮೌಲ್ಯ 2,25,000/- ರೂಗಳ 41.6 ಗ್ರಾಂ ತೂಕದ ಬಂಗಾರವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. 

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.



Post a Comment

Previous Post Next Post