ಚಿತ್ರದುರ್ಗ ಜೈಲಿನಿಂದ ಮುರುಘಾ ಶ್ರೀ ಬಿಡುಗಡೆ: ಚಿತ್ರದುರ್ಗ ಪ್ರವೇಶ ಮಾಡುವಂತಿಲ್ಲ ಸೇರಿದಂತೆ 7 ಷರತ್ತು ವಿಧಿಸಿದ ಕೋರ್ಟ್

 ಚಿತ್ರದುರ್ಗ: ಚಿತ್ರದುರ್ಗ ಜೈಲಿನಿಂದ ಜಾಮೀನು ಮೇಲೆ ಮುರುಘಾಶ್ರೀ ಬಿಡುಗಡೆಯಾಗಿದ್ದಾರೆ. 14 ತಿಂಗಳ ಬಳಿಕ ಮುರುಘಾಶ್ರೀ, ಪೋಕ್ಸೋ ಪ್ರಕರಣದಲ್ಲಿ ಜಾಮೀನು ಸಿಕ್ಕ ಹಿನ್ನಲೆ ಜೈಲಿನಿಂದ ಹೊರಬಂದಿದ್ದಾರೆ. ಆದರೆ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ಮಾಡುವಂತಿಲ್ಲ ಸೇರಿದಂತೆ ಹಲವು ಷರತ್ತುಗಳನ್ನು ಹೈಕೋರ್ಟ್ ಹಾಕಿದೆ.

ಜೈಲಿನಿಂದ ಹೊರಬಂದ ಮುರುಘಾಶ್ರೀ ನೇರವಾಗಿ ದಾವಣಗೆರೆಗೆ ತೆರಳಿದ್ದಾರೆ. ಭಕ್ತರು ಸ್ವಾಗತ ಮಾಡಿದ್ದಾರೆ.
ಆಗಷ್ಟ್ 26 , 2022 ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬಳಿಕ ನಿರೀಕ್ಷಣಾ ಜಾಮೀನನ್ನು ಕೂಡಾ ಕೋರ್ಟ್ ತಿರಸ್ಕರಿಸಿತ್ತು.


ಹೈಕೋರ್ಟ್ ಆದೇಶದ ಪ್ರಕಾರ, ಷರತ್ತುಗಳನ್ನು ಪೂರೈಸಿದ ಕಾರಣ, ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಕಾನೂನು ಚೌಕಟ್ಟು ಪ್ರಕಾರ ನಡೆದಿದೆ. ಎರಡನೇ ಪ್ರಕರಣದಲ್ಲಿಯೂ ಜಾಮೀನು ಬೇಕಾಗಿಲ್ಲ ಎಂದು ಮುರುಘಾಶ್ರೀ ಪರ ವಕೀಲ ಕೆವಿಕೆ ಸ್ವಾಮಿ ಹೇಳಿದ್ದಾರೆ.


ಪ್ರಕರಣದ ಸಾಕ್ಷ್ಯಾಧಾರ ನಾಶ ಮಾಡುವಂತಿಲ್ಲ, ಪ್ರಭಾವ ಬೀರುವಂತಿಲ್ಲ. ಇಂತಹ ಕೃತ್ಯ ಪುನರಾವರ್ತನೆ ಮಾಡುವಂತಿಲ್ಲ. ಇಬ್ಬರು ಶೂರಿಟಿ ನೀಡಬೇಕು. ಪಾಸ್‌ಪೋರ್ಟ್ ಕೋರ್ಟ್‌ಗೆ ಸಲ್ಲಿಸಬೇಕು. ಕೋರ್ಟ್‌ಗೆ ವಿಸಿ ಮೂಲಕ ಹಾಜರಾಗಬೇಕು. ಚಿತ್ರದುರ್ಗಕ್ಕೆ ಪ್ರವೇಶವಿಲ್ಲ. ವೀಡಿಯೋ ಕಾನ್ಫರೆನ್ಸ್‌ ಮೂಲಕವಾದರೂ ಪ್ರಕರಣದ ವಿಚಾರಣೆಗೆ ಹಾಜರಾಗಬೇಕು.

ವಕೀಲರಾದ ಸಂದೀಪ್ ಪಾಟೀಲ್ ಮಾತನಾಡಿ, ನಾಲ್ಕು ದಿನ ಮೊದಲೇ ಬಿಡುಗಡೆ ಆಗಬೇಕಿತ್ತು ಆದರೆ ದೀಪಾವಳಿ ರಜೆ ಹಿನ್ನಲೆ ಇವತ್ತು ರಿಲೀಸ್ ಆಗಿದ್ದಾರೆ. ಯಾವ ಕೇಸ್‌ನಲ್ಲಿ ಕಸ್ಟಡಿಯಲ್ಲಿರುತ್ತಾರೆ, ಅದರಲ್ಲಿ ನಾವು ಬೇಲ್ ಹಾಕಬಹುದು. ಎರಡನೇ ಪ್ರಕರಣದಲ್ಲಿ ಕಸ್ಟಡಿಯಾಗಲೀ ಅರೆಸ್ಟಾಗಲಿ ಆಗಲೇ ಇಲ್ಲ. ಹಾಗಾಗಿ ಮೊದಲನೇ ಪ್ರಕರಣದಲ್ಲಿ ಬಿಡುಗಡೆ ಮಾಡಲಾಗಿದೆ ಎಂದರು. ಬೇಲ್‌ ಪ್ರಕಾರ ಹಾಕಿರುವ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ ಎಂದರು.

ಮುರುಘಾಮಠದ ಪೀಠಾಧ್ಯಕ್ಷರಾಗಿದ್ದ ಮುರುಘಾ ಶ್ರೀ, ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನವಾಗಿದ್ದರು. ಮಠದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪದಲ್ಲಿ ಬಂಧನವಾಗಿತ್ತು. 761 ಪುಟಗಳ ಚಾರ್ಜ್‌ಶೀಟ್‌ ಫೈಲ್ ಮಾಡಲಾಗಿತ್ತು. ನಿನ್ನೆ ಬೇಲ್ ಆದೇಶ ತಡವಾಗಿದ್ದರಿಂದ ನಿನ್ನೆಯ ಬದಲು ಇಂದು ರಿಲೀಸ್ ಆಗಿದ್ದಾರೆ.

Post a Comment

Previous Post Next Post